ಪುತ್ತೂರು ಅಂಚೆ ವಿಭಾಗ, ಮೂಡುಬಿದಿರೆ ಪುರಸಭೆ ಸಹಯೋಗದಲ್ಲಿ ಮನೆಬಾಗಿಲಿಗೆ ಜನನ/ಮರಣ ಪ್ರಮಾಣ ಪತ್ರ ಸೇವೆಗೆ ಚಾಲನೆ

ಪತ್ರಿಕಾ ಪ್ರಕಟಣೆ
ದಿನಾಂಕ 26.07.2022: ಭಾರತೀಯ ಅಂಚೆ ಇಲಾಖೆ, ಪುತ್ತೂರು ವಿಭಾಗ ಹಾಗೂ ಪುರಸಭೆ ಮೂಡುಬಿದಿರೆ ಇದರ ಸಹಭಾಗಿತ್ವದಲ್ಲಿ ಸ್ಫೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆಬಾಗಿಲಿಗೆ ಜನನ/ಮರಣ ಪ್ರಮಾಣ ಪತ್ರಗಳನ್ನು ತಲುಪಿಸುವ ಸೇವೆಯ ಒಡಂಬಡಿಕೆಗೆ ಮೂಡುಬಿದಿರೆ ಪುರಸಭಾ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಡಾ. ಏಂಜೆಲ್ ರಾಜ್ IPOs , ಮೂಡುಬಿದಿರೆ ಪುರಸಭಾ ಮುಖ್ಯ ಅಧಿಕಾರಿಗಳಾದ ಶ್ರೀಮತಿ ಇಂದು ಎಂ, ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್, ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಶಶಿಧರ್ , ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗರಾಜ್ ಪೂಜಾರಿ ,ಮತ್ತು ಪುತ್ತೂರು ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀ ಜೋಸೆಫ್ ರೋಡ್ರಿಗಸ್, ಬಂಟ್ವಾಳ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀ. ಲೋಕನಾಥ್ ಎಮ್ , ಮೂಡುಬಿದಿರೆ ಅಂಚೆ ಪಾಲಕರು ಶ್ರೀಮತಿ ಉಷಾ, ಪುತ್ತೂರು ಅಂಚೆ ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಶ್ರೀ ಗುರುಪ್ರಸಾದ್ ಕೆ.ಎಸ್. ಮತ್ತು ಮೂಡುಬಿದಿರೆ ಪುರಸಭೆಯ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಡಾ. ಏಂಜೆಲ್ ರಾಜ್ ಇವರು ಮಾತನಾಡಿ, ಜನನ ಮತ್ತು ಮರಣ ಪತ್ರವನ್ನು ಮನೆ ಬಾಗಿಲಿಗೆ ತಲುಪಿಸುವ ನೂತನ ಸೇವೆಯಿಂದ ಸಾರ್ವಜನಿಕರಿಗೆ ಆಗುವ ಅನುಕೂಲಗಳ ಬಗ್ಗೆ ತಿಳಿಸಿದರು ಹಾಗೂ ಜನತೆಗೆ ಈ ಸೇವೆಯನ್ನು ತಲುಪಿಸುವಲ್ಲಿ ಮೂಡುಬಿದಿರೆ ಪುರಸಭೆಯ ಸಹಭಾಗಿತ್ವವನ್ನು ಕೋರಿದರು. ಮುಖ್ಯಾಧಿಕಾರಿಗಳು ಈ ಒಡಂಬಡಿಕೆಗೆ ಪುರಸಭೆ ಮೂಡುಬಿದಿರೆ ಯ ಸಂಪೂರ್ಣ ಸಹಕಾರದ ಭರವಸೆ ನೀಡಿ ಶುಭ ಹಾರೈಸಿದರು. ಪುರಸಭಾ ಅಧ್ಯಕ್ಷರು ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರು ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸೇವೆಯ ವಿಶೇಷತೆ:
ಸಾರ್ವಜನಿಕರು ಜನನ ಮತ್ತು ಮರಣ ಪ್ರಮಾಣ ಪತ್ರಕ್ಕಾಗಿ ನಗರ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸುವಾಗ, ಪ್ರಮಾಣ ಪತ್ರದ ಅರ್ಜಿಯ ಜೊತೆಗೆ, ಅಂಚೆ ಇಲಾಖೆಯ ಅರ್ಜಿಯನ್ನು ಪೂರ್ಣವಾಗಿ ಭರ್ತಿಮಾಡಿ ಕೊಟ್ಟರೆ, ಅರ್ಜಿದಾರರು ಜನನ/ಮರಣ ಪ್ರಮಾಣ ಪತ್ರವನ್ನು ಪಡೆಯಲು ಮತ್ತೊಂದು ಬಾರಿ ಕಛೇರಿಗಳಿಗೆ ಭೇಟಿನೀಡಬೇಕಾಗಿರುವುದಿಲ್ಲ. ನೇರವಾಗಿ ಅಂಚೆ ಇಲಾಖೆಯೇ ಈ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಂಡು, ಅಂಚೆಯಣ್ಣನ ಮೂಲಕ ಸಾರ್ವಜನಿಕರ ಮನೆಬಾಗಿಲಿಗೆ ತಲುಪಿಸುತ್ತದೆ. ಈ ಸೇವೆ ಪಡೆಯುವ ಅರ್ಜಿದಾರರು ಜನನ/ಮರಣ ಪತ್ರದ ಬಟವಾಡೆ ಸಮಯದಲ್ಲಿ ಕೇವಲ ನೂರು ರೂಪಾಯಿಗಳನ್ನು ಪಾವತಿಮಾಡಿದರೆ ಆಯಿತು.
ಸಾರ್ವಜನಿಕರು ಈ ವಿಶಿಷ್ಠ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ ಮಾಡಲಾಗಿದೆ.

Leave a Comment