ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವ ಘನ ಭಾರತ ಸರಕಾರದ ಮುಖ್ಯ ಸಾರ್ವಜನಿಕ ಸೇವೆಯನ್ನು ನೀಡುತ್ತಿರುವ ಭಾರತೀಯ ಅಂಚೆ ಇಲಾಖೆಯು ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಇಂದು ದಿನಾಂಕ 12.08.2022 “ವಿಭಜನೆಯ ಕರಾಳ ನೆನಪಿನ ದಿನ”ವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ 96 ವರ್ಷದ ಹಿರಿಯ ನಾಗರಿಕರಾಗಿರುವ ಪುತ್ತೂರಿನ ಶ್ರೀ. ಬಿ. ಎಸ್. ಕುಲಾಲ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ಶ್ರೀಯುತರು ಮಾತನಾಡುತ್ತಾ, ಬಹಳಷ್ಟು ಜನರ ತ್ಯಾಗ ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯವು ಲಭಿಸಿದೆ. ಪ್ರಸ್ತುತ ಸ್ವತಂತ್ರ ಭಾರತದಲ್ಲಿ ಪ್ರಜೆಗಳು ಸ್ವಾತಂತ್ರ್ಯ ಸಿಗಲು ಅಂದು ಅನುಭವಿಸಿದ ಜನರ ಬವಣೆಯ ಫಲದ ಮಹತ್ವವನ್ನು ಅರಿತಿಲ್ಲ ಎಂದರು. ಸ್ವಾತಂತ್ರ್ಯ ಲಭಿಸಿ 75 ವರುಷ ಸಂದರೂ, ಪೂಜ್ಯ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗದಿರುವುದಕ್ಕೆ ಖೇದ ವ್ಯಕ್ತಪಡಿಸುತ್ತಾ, ರಾಮರಾಜ್ಯವು ಇಂದಿನಿಂದ ನಾಳೆಗೆ ಪರಿವರ್ತಿತವಾಗುವುದಲ್ಲ, ಬದಲಿಗೆ ಅದೊಂದು ದೀರ್ಘಾವಧಿಯ ಪ್ರಕ್ರಿಯೆ. ಅಲ್ಲದೇ, ಘನ ಸರಕಾರವು ಕೇಂದ್ರಾಡಳಿತ ಪ್ರದೇಶದಲ್ಲಿ ವಿವಿಧ ಕಾರ್ಯಕ್ರಮದ ಮೂಲಕ ರಾಮರಾಜ್ಯದ ಅಡಿಪಾಯವನ್ನು ಹಾಕುವುದರ ಮೂಲಕ ಗುರಿಯನ್ನ ಸಾಧಿಸಬಹುದು. ನಿಧಾನವಾಗಿ ರಾಷ್ಟ್ರಾದ್ಯಂತ ವಿಸ್ತರಿಸಬಹುದು. ಈ ನಿಟ್ಟಿನಲ್ಲಿ ಯುವಜನತೆಯು ರಾಮರಾಜ್ಯದ ಮೌಲ್ಯವನ್ನರಿತು ಗರಿಷ್ಠ ಪ್ರಮಾಣದ ಕೊಡುಗೆಯನ್ನು ಭಾರತಕ್ಕೆ ನೀಡಲು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಡಾ. ಏಂಜಲ್ ರಾಜ್ ಇವರು ಭಾರತದ ವಿಭಜನೆಯ ಸಂದರ್ಭದಲ್ಲಿ ನಾಗರಿಕರು ಅನುಭವಿಸಿದ ನೋವನ್ನು ನೆನಪಿಸುತ್ತಾ, ಕರಾಳ ವಿಭಜನೆಯ ಕಷ್ಟವನ್ನು ಭವಿಷ್ಯದಲ್ಲಿ ಭಾರತೀಯ ಪ್ರಜೆಗಳು ಅನುಭವಿಸದಿರಲಿ ಎಂದು ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಪ್ರಧಾನ ಅಂಚೆ ಪಾಲಕರಾದ ಶ್ರೀ. ತೀರ್ಥಪ್ರಸಾದ್ ಎಸ್. , ಪುತ್ತೂರು ವಿಭಾಗದ ಸ್ಥಾನೀಯ ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀ. ಮೋಹನ ಬಿ, ಪುತ್ತೂರು ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀ. ಎ. ಜಿ. ಮರಡಿ ಯವರು ಉಪಸ್ಥಿತರಿದ್ದರು. ಶ್ರೀ. ಜಗನ್ನಾಥ್ ಎಂ, ಕಾರ್ಯಾಲಯ ಸಹಾಯಕರು ಸ್ವಾಗತಿಸಿದರು, ಶ್ರೀಮತಿ ವಾಣಿ ಬೇಕಲ್ , ಅಂಚೆ ಸಹಾಯಕರು ಪುತ್ತೂರು ಪ್ರಧಾನ ಅಂಚೆ ಕಚೇರಿ ಇವರು ವಂದಿಸಿದರು. ಶ್ರೀ. ರೋಹನ್ ಲೂಯೀಸ್ ಎ ಪ್ರಶಿಕ್ಷಕರು ಪುತ್ತೂರು ಇವರ ನಿರೂಪಣೆಯೊಂದಿಗೆ, ಅಂಚೆ ಗ್ರಾಹಕರ ಹಾಗೂ ನೌಕರ ಬಾಂಧವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಪರಿಸಮಾಪ್ತಿಯಾಯಿತು.
